ಉಡುಪಿ ಸ್ಕಾರ್ಫ್ ಪ್ರಕರಣ: ವಿದ್ಯಾರ್ಥಿನಿಯರಿಗೆ ಶಿಕ್ಷಣ ನಿರಾಕರಣೆ ಕುರಿತು ಗಣ್ಯರಿಂದ ಖಂಡನೆ
ಹೊಸದಿಲ್ಲಿ: ಉಡುಪಿ ಸರಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಕಾಲೇಜಿನ ಹೊರಗಡೆ ಕುಳಿತು ಅಧ್ಯಯನ ನಡೆಸುವುದನ್ನು ಮುಂದುವರಿಸಿದ್ದಾರೆ. ಸತತ ಮೂರು ವಾರಗಳಿಂದ ಹಾಜರಾತಿಯನ್ನೂ ದಾಖಲಿಸಲಾಗಿಲ್ಲ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರಿಯ ಮಟ್ಟದಿಂದ ಖಂಡನೆ ವ್ಯಕ್ತವಾಗಿದೆ.
"ಭಾರತದ ಉಡುಪಿ ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ಬರುವುದನ್ನು 'ಸಮವಸ್ತ್ರ ನಿಯಮಗಳ' ಹೆಸರಿನಲ್ಲಿ ನಿಷೇಧಿಸಲಾಗಿದೆ. ಇದು ನನಗೆ ಫ್ರಾನ್ಸ್ ನಲ್ಲಿ ಮಾಡಿದಂತೆಯೇ ತೋಚುತ್ತಿದೆ" ಎಂದು ಅಂತಾರಾಷ್ಟ್ರೀಯ ಲೇಖಕ ಖಾಲಿದ್ ಬೇದೂನ್ ಟ್ವೀಟ್ ಮಾಡಿದ್ದಾರೆ.
"ಸರಕಾರ ನಡೆಸುತ್ತಿರುವ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿಕೊಂಡು ಬರುವುದಕ್ಕೆ ಮೂರು ವಾರಗಳಿಂದ ಅನುಮತಿ ನೀಡಿಲ್ಲ. ಭಾರತ ಈಗಲೂ ಜಾತ್ಯತೀತವಾಗಿಯೇ ಉಳಿದಿದೆಯೇ?" ಎಂದು ಉಪ್ಸಲಾ ಯುನಿವರ್ಸಿಟಿಯ ಶಾಂತಿ ಮತ್ತು ಸಂಘರ್ಷ ಸಂಶೋಧನೆಯ ಪ್ರಾಧ್ಯಾಪಕ ಅಶೋಕ್ ಸ್ವೇನ್ ಟ್ವೀಟ್ ಮಾಡಿದ್ದಾರೆ.
ಹಿಂದೂ ಧರ್ಮಕ್ಕೆ ಸೇರಿದ ವಿದ್ಯಾರ್ಥೀನಿಯರು ಬಳೆ ಮತ್ತು ಬಿಂದಿ ತೊಡುತ್ತಾರೆ. ದೀಪಾವಳಿ ಮತ್ತು ಇನ್ನಿತರ ಹಬ್ಬಗಳನ್ನೂ ನಮ್ಮ ಶಾಲೆಗಳಲ್ಲಿ ಆಚರಿಸಲಾಗುತ್ತದೆ. ಆದರೆ ನಾವು ಹಿಜಾಬ್ ಏಕೆ ಧರಿಸಬಾರದು? ಈ ವಿದ್ಯಾರ್ಥಿನಿಯರು ಪ್ರತಿಕೂಲ ಪರಿಸ್ಥಿತಿಯಲ್ಲಿ ತಮ್ಮ ಧ್ವನಿಯೆತ್ತಿದ್ದಾರೆ. ಅವರೊಂದಿಗೆ ಧ್ವನಿಗೂಡಿಸಿ ಎಂದು ಸಾಮಾಜಿಕ ಕಾರ್ಯಕರ್ತೆ ಸಫೂರಾ ಝರ್ಗಾರ್ ಟ್ವೀಟ್ ಮಾಡಿದ್ದಾರೆ. ಇನ್ನೂ ಹಲವಾರು ಮಂದಿ ಗಣ್ಯರು ಈ ಕುರಿತು ಟ್ವಿಟರ್ ನಲ್ಲಿ ಧ್ವನಿಯೆತ್ತಿದ್ದಾರೆ.
0 التعليقات: