ಡಿಕೆಶಿ ವಿರುದ್ಧ ಹೇಳಿಕೆ ವಿಚಾರ: ಕಾಂಗ್ರೆಸ್ ಮಾಧ್ಯಮ ಸಂಯೋಜಕ ಸಲೀಂ ಉಚ್ಛಾಟನೆ-ವಿ.ಎಸ್.ಉಗ್ರಪ್ಪಗೆ ಶೋಕಾಸ್ ನೋಟಿಸ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುರಿತು ಆಕ್ಷೇಪಾರ್ಹವಾಗಿ ಪಕ್ಷದ ಕಚೇರಿಯಲ್ಲಿ ಮಾತುಕತೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯ ಅಧ್ಯಕ್ಷ ಡಾ.ಕೆ.ರಹ್ಮಾನ್ ಖಾನ್, ಕೆಪಿಸಿಸಿ ಮಾಧ್ಯಮ ಸಂಯೋಜಕ ಎಂ.ಎ.ಸಲೀಸಲೀಂ ಅವರನ್ನು ಆರು ವರ್ಷಗಳ ಕಾಲ ಪಕ್ಷದ ಸದಸ್ಯತ್ವದಿಂದ ಉಚ್ಛಾಟಿಸಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪಗೆ ಮೂರು ದಿನಗಳಲ್ಲಿ ಸಮಜಾಯಿಷಿ ನೀಡುವಂತೆ ಸೂಚಿಸಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ವಿ.ಎಸ್.ಉಗ್ರಪ್ಪ ಕರೆದಿದ್ದ ಸುದ್ದಿಗೋಷ್ಠಿ ಆರಂಭವಾಗುವುದಕ್ಕೆ ಮುನ್ನ ಸಲೀಮ್ ಅವರು ಖಾಸಗಿಯಾಗಿ ಉಗ್ರಪ್ಪ ಜೊತೆ ನಡೆಸಿದ ಮಾತುಕತೆ ಮಾಧ್ಯಮಗಳ ಕ್ಯಾಮಾರದಲ್ಲಿ ಸೆರೆಯಾಗಿ ವೈರಲ್ ಆಗಿತ್ತು.
ಎಂ.ಎ.ಸಲೀಮ್ ಅಮಾನತ್ತು: ಕೆಪಿಸಿಸಿ ಮಾಧ್ಯಮ ಸಂಯೋಜಕ ಎಂ.ಎ.ಸಲೀಮ್ ಅವರನ್ನು ತುರ್ತು ಶಿಸ್ತುಪಾಲನಾ ಸಮಿತಿಯ ಸಭೆಯಲ್ಲಿ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ಅ.12ರಂದು ಎಂ.ಎ.ಸಲೀಮ್ ಅವರು ವಿ.ಎಸ್.ಉಗ್ರಪ್ಪ ಅವರೊಂದಿಗೆ ನಡೆದ ಖಾಸಗಿ ಮಾತುಕತೆಗಳು ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗಿರುವ ಬಗ್ಗೆ ಹಾಗೂ ಅವರ ಬೇಜವಾಬ್ದಾರಿ ನಡವಳಿಕೆಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮುಂದಿನ ಆರು ವರ್ಷಗಳ ವರೆಗೆ ಉಚ್ಛಾಟಿಸಲಾಗಿದೆ ಎಂದು ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಡಾ.ಕೆ.ರಹ್ಮಾನ್ಖಾನ್ ತಿಳಿಸಿದ್ದಾರೆ.
ಉಗ್ರಪ್ಪಗೆ ಶೋಕಾಸ್ ನೋಟಿಸ್: ಎಂ.ಎ.ಸಲೀಮ್ ಅವರೊಂದಿಗೆ ಖಾಸಗಿಯಾಗಿ ಮಾತನಾಡುವಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಘನತೆ, ಗೌರವಗಳಿಗೆ ಕುಂದುಂಟಾಗುವಂತೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಪಾರ ಹಾನಿ ಉಂಟಾಗುವಂತಹ ಅನೇಕ ವಿಚಾರಗಳನ್ನು ಮಾತನಾಡಿಕೊಂಡಿರುವುದು ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ತಾವು ಈ ಸಂದರ್ಭದಲ್ಲಿ ಮಾತನಾಡಿಕೊಂಡಿರುವ ವಿಚಾರಗಳು ಆಧಾರ ರಹಿತವಾಗಿದ್ದು, ಕಾಂಗ್ರೆಸ್ ಪಕ್ಷವು ಇದನ್ನು ಸಂಪೂರ್ಣವಾಗಿ ಖಂಡಿಸುತ್ತದೆ ಮತ್ತು ನಿರಾಕರಿಸುತ್ತದೆ. ಈ ಹಿನ್ನೆಲೆಯಲ್ಲಿ ತಾವು ತಮ್ಮ ಈ ಮೇಲಿನ ನಡವಳಿಕೆಯ ಬಗ್ಗೆ ತಕ್ಷಣ ಸಮಜಾಯಿಷಿಯನ್ನು ಮೂರು ದಿನಗಳ ಒಳಗಾಗಿ ನೀಡಬೇಕು ಎಂದು ಉಗ್ರಪ್ಪಗೆ ರಹ್ಮಾನ್ ಖಾನ್ ಸೂಚಿಸಿದ್ದಾರೆ.
0 التعليقات: