ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಉತ್ತರ ಪ್ರದೇಶ ಪೊಲೀಸರಿಂದ ಎ ಫ್ ಐ ಆರ್
ಲಕ್ನೋ: ಅಸ್ಸಾಂ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್-19 ಸಂತ್ರಸ್ತರಿಗೆ ಹಾಗೂ ನೆರೆ ಸಂತ್ರಸ್ತರಿಗಾಗಿ ನಿಧಿ ಸಂಗ್ರಹ ಅಭಿಯಾನ ನಡೆಸಿದ್ದಕ್ಕಾಗಿ ಉತ್ತರ ಪ್ರದೇಶದ ಗಝಿಯಾಬಾದ್ ಪೊಲೀಸರು ಪತ್ರಕರ್ತೆ ರಾಣಾ ಆಯ್ಯುಬ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. 'ಹಿಂದು ಐಟಿ ಸೆಲ್' ಎಂಬ ಹೆಸರಿನ ಹಿಂದುತ್ವ ಸಂಘಟನೆಯೊಂದು ಸಲ್ಲಿಸಿದ ದೂರಿನ ಆಧಾರದಲ್ಲಿ ಈ ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
"ದಾನ''ದ ಹೆಸರಿನಲ್ಲಿ ಆನ್ಲೈನ್ ವೇದಿಕೆಯ ಮೂಲಕ ರಾಣಾ ಅಯ್ಯೂಬ್ ಅವರು ಅಕ್ರಮವಾಗಿ ಹಣ ಸಂಗ್ರಹಿಸಿದ್ದಾರೆ ಹಾಗೂ ಸರಕಾರದ ಅನುಮತಿಯಿಲ್ಲದೆ ಆಕೆ ವಿದೇಶಿ ದೇಣಿಗೆಗಳನ್ನು ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಆಕೆಯ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆಯ ಸೆಕ್ಷನ್ 4 ಹಾಗೂ ಐಟಿ ಕಾಯಿದೆಯ ಸೆಕ್ಷನ್ 66ಡಿ ಹಾಗೂ ಐಪಿಸಿಯ ಸೆಕ್ಷನ್ 403, 418, 420 ಅನ್ವಯ ಪ್ರಕರಣ ದಾಖಲಾಗಿದೆ.
ಗಝಿಯಾಬಾದ್ನ ವೃದ್ಧನ ಮೇಲೆ ನಡೆದ ಹಲ್ಲೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಕ್ಕಾಗಿ ಜೂನ್ ತಿಂಗಳಲ್ಲಿ ಕೂಡ ರಾಣಾ ಅಯ್ಯೂಬ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆಕೆಗೆ ನಾಲ್ಕು ವಾರಗಳ ಕಾಲ ಬಂಧನದಿಂದ ರಕ್ಷಣೆಯನ್ನು ಬಾಂಬೆ ಹೈಕೋರ್ಟ್ ಜೂನ್ 21ರಂದು ಒದಗಿಸಿತ್ತು.
0 التعليقات: