ಅತ್ಯಾಚಾರ ಆರೋಪ: ಕಂಗನಾ ರಣಾವತ್ ಬಾಡಿಗಾರ್ಡ್ ಮಂಡ್ಯದಲ್ಲಿ ಬಂಧನ
ಬೆಂಗಳೂರು: ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಬಾಲಿವುಡ್ ಚಿತ್ರನಟಿ ಕಂಗನಾ ರಣಾವತ್ ಬಾಡಿ ಗಾರ್ಡ್ ಕುಮಾರ ಹೆಗಡೆಯನ್ನು ಮುಂಬೈ ಪೊಲೀಸರು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೆಗ್ಗಡಹಳ್ಳಿಯಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಸಂತ್ರಸ್ತ ಯುವತಿಯ ಜೊತೆಗೆ ಕುಮಾರ್ ಹೆಗಡೆಗೆ ಕಳೆದ 8 ವರ್ಷಗಳ ಹಿಂದೆ ಪರಿಚಯವಾಗಿತ್ತು. ಕಳೆದ ವರ್ಷ ಜೂನ್ ನಲ್ಲಿ ಆತ ಮದುವೆ ಪ್ರಸ್ತಾವ ಕೂಡ ಮಾಡಿದ್ದ. ಅದಕ್ಕೆ ಯುವತಿ ಸಮ್ಮತಿ ಸಿಕ್ಕಿತ್ತು. ಬಳಿಕ ಆತ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದ ಎನ್ನಲಾಗಿದೆ.
ಎ.27ರಂದು ತನ್ನ ತಾಯಿ ನಿಧನರಾಗಿದ್ದಾರೆ ಎಂದು ಹೇಳಿ ತನ್ನಿಂದ 50,000 ರೂ. ಹಣ ಪಡೆದು ಅಪಾರ್ಟ್ ಮೆಂಟ್ ನಿಂದ ಪರಾರಿ ಆಗಿದ್ದ ಕುಮಾರ್ ತನ್ನ ಊರು ತಲುಪಿದ ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ ಎಂದು ಯುವತಿ ಮುಂಬೈನ ಅಂಧೇರಿ ಉಪನಗರದ ಡಿ. ಎನ್. ನಗರ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಬ್ಯೂಟಿಶಿಯನ್ ಆಗಿರುವ ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಕಂಗನಾ ಬಾಡಿಗಾರ್ಡ್ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ ಪ್ರಕರಣ) ಹಾಗೂ 420 (ವಂಚನೆ)ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು ಎಂದು ಮೇ 22ರಂದು ಎಎನ್ ಐ ಟ್ವೀಟ್ ಮಾಡಿತ್ತು.
ಯುವತಿಯ ದೂರನ್ನು ಆಧರಿಸಿ ಮುಂಬೈ ಪೊಲೀಸರು ಕುಮಾರ್ ಹೆಗಡೆಗಾಗಿ ಹುಡುಕಾಟ ನಡೆಸಿದ್ದರು. ಹೆಗ್ಗಡಹಳ್ಳಿಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ಬಂದು ಬಂಧಿಸಿದ್ದಾರೆ. ಸದ್ಯ ಕೆ.ಆರ್.ಪೇಟೆಯ ಜಿಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂಬೈಗೆ ಕರೆದೊಯ್ದಿದ್ದಾರೆ.
0 التعليقات: