ಪರೀಕ್ಷೆಗೂ ಮುನ್ನವೇ ಎಫ್ಡಿಎ ಪ್ರಶ್ನೆಪತ್ರಿಕೆ ಔಟ್: ಸಿಎಂ ಯಡಿಯೂರಪ್ಪ ಗರಂ
ಬೆಂಗಳೂರು: ಪರೀಕ್ಷೆಗೂ ಮುನ್ನವೇ ಎಫ್ಡಿಎ(ಪ್ರಥಮ ದರ್ಜೆ ಸಹಾಯಕರ) ಎಕ್ಸಾಂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಈ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಇದುವರೆಗೂ 34 ಆರೋಪಿಗಳನ್ನು ಬಂಧಿಸಿದ್ದು, ಲಕ್ಷಾಂತರ ಹಣ ಜಪ್ತಿ ಮಾಡಿದೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕರ(ಎಫ್ಡಿಎ) ಹುದ್ದೆಗಳ ನೇಮಕಾತಿಗೆ ಇಂದು(ಜ.24) ನಡೆಯಬೇಕಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ನಿನ್ನೆಯೇ ಸೋರಿಕೆ ಆಗಿದ್ದು, ಕೆಪಿಎಸ್ಸಿ ಎಕ್ಸಾಂ ಮುಂದೂಡಿದೆ. ಲೀಕಾಸುರ ಗ್ಯಾಂಗ್ನಲ್ಲಿರುವ ಪ್ರತಿಯೊಬ್ಬರನ್ನೂ ಬಂಧಿಸಲು ಸಿಸಿಬಿ ಕಾರ್ಯಾಚರಣೆ ಮಿಂಚಿನಂತೆ ಸಾಗಿದ್ದು, ಎಫ್ಡಿಎ ಎಕ್ಸಾಂ ಪ್ರಶ್ನೆಪತ್ರಿಕೆ ಲೀಕ್ ಆಗಿದ್ದ ಪ್ರಕರಣ ಸಂಬಂಧ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ.
ಶಿವಮೊಗ್ಗದಲ್ಲಿ ಭಾನುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಔಟ್ ಆಗಿರುವುದು ಅಕ್ಷಮ್ಯ ಅಪರಾಧ. ಈ ಬಗ್ಗೆ ನಿನ್ನೆ ರಾತ್ರಿಯೇ ಮಾಹಿತಿ ಪಡೆದಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ತಪ್ಪಿತಸ್ಥ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲು ಸೂಚಿಸಿದ್ದೇನೆ. ಅಗತ್ಯ ಬಿದ್ದರೆ ಹುದ್ದೆಯಿಂದಲೇ ವಜಾಗೊಳಿಸಲು ಸೂಚಿಸಲಾಗಿದೆ ಎಂದರು.
0 التعليقات: