ರೈತರ ಪ್ರತಿಭಟನೆ: ಇಂದು 8ನೇ ಸುತ್ತಿನ ಮಾತುಕತೆ, ಪಟ್ಟು ಬಿಡದ ರೈತರಿಗೆ ಮಣಿಯುವುದೇ ಕೇಂದ್ರ ಸರ್ಕಾರ!
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯತ್ತಿರುವ ರೈತರ ಮ್ಯಾರಥಾನ್ ಪ್ರತಿಭಟನೆ ಮುಂದುವರೆದಿದ್ದು, ಇಂದು ರೈತರು ಮತ್ತು ಸರ್ಕಾರದ ನಡುವೆ 8ನೇ ಸುತ್ತಿನ ಮಾತುಕತೆ ನಡೆಯಲಿದೆ.
ಹೌದು.. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಹಾಗೂ ಸರ್ಕಾರದ ನಡುವೆ ಇಂದು ಎಂಟನೇ ಸುತ್ತಿನ ಮಾತುಕತೆ ನಡೆಯಲಿದೆ. ಕಾಯ್ದೆಗಳನ್ನು ಹಿಂಪಡೆಯಲು ಸರ್ಕಾರ ನಿರಾಕರಿಸುತ್ತಿರುತಂವೆತೆಯೇ ಕಾಯ್ದೆಯನ್ನು ಒಪ್ಪಿಕೊಳ್ಳಲು ಕೂಡ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಕಾಯ್ದೆಗಳಿಂದ ನಮ್ಮ ಆದಾಯಕ್ಕೆ ಹೊಡೆತ ಬೀಳಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಜನವರಿ 26ರೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು ಇಲ್ಲವಾದಲ್ಲಿ ಗಣರಾಜ್ಯೋತ್ಸವದಂದು ದೆಹಲಿಗೆ ನುಗ್ಗುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಅದರಂತೆ ರಾಜಧಾನಿಯ ಹೊರವಲಯದಲ್ಲಿ ಗುರುವಾರ ಟ್ರಾಕ್ಟರ್ ತಾಲೀಮು ಕೂಡ ಆರಂಭಿಸಿದ್ದಾರೆ.
ಈ ಹಿಂದೆ ಜನವರಿ 4ರಂದು ಏಳನೇ ಸುತ್ತಿನ ಮಾತುಕತೆ ನಡೆದಿತ್ತು. ಈ ವೇಳೆ ಸೆಪ್ಟೆಂಬರ್ನಲ್ಲಿ ಸರ್ಕಾರ ಅಂಗೀಕರಿಸಿರುವ ಮೂರು ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ರೈತರು ಒತ್ತಾಯಿಸಿದ್ದರು. ಆದರೆ, ಅದು ಸಾಧ್ಯವಿಲ್ಲ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನಿರಾಕರಿಸಿದ್ದರು.
ಈ ಕುರಿತಂತೆ ಮಾತನಾಡಿರುವ ಸ್ವರಾಜ್ ಇಂಡಿಯಾ ಪಕ್ಷ ಹಾಗೂ ರೈತ ನಾಯಕ ಯೋಗೇಂದ್ರ ಯಾದವ್ ಅವರು, 'ಸರ್ಕಾರದ ಬಳಿ ಹೊಸ ಪ್ರಸ್ತಾಪವಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಂತಹ ಯಾವುದೇ ವಿಚಾರವಿಲ್ಲ. ಇಂದು ನಡೆಯುವ ಯಶಸ್ವಿ ಟ್ರಾಕ್ಟರ್ ರ್ಯಾಲಿ ಮೇಲಿನ ಮಾಧ್ಯಮಗಳ ಗಮನವನ್ನು ಬೇರೆಡೆಗೆ ಸೆಳೆಯುವುದು ಸರ್ಕಾರದ ಉದ್ದೇಶವಾಗಿದೆ. ನಾವು ಮತ್ತೊಮ್ಮೆ ನೆನಪಿಸುತ್ತೇವೆ. ಕಾಯ್ದೆಗಳು ಸಂಪೂರ್ಣವಾಗಿ ರದ್ದಾಗಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ಪಡೆಯುವುದು ಎಲ್ಲ ರೈತರ ಹಕ್ಕಾಗಬೇಕು ಎಂದು ಹೇಳಿದ್ದಾರೆ.
ಅಖಿಲ ಭಾರತ ಕಿಸಾನ್ ಸಂಘರ್ಷ ಸಹಕಾರ ಸಮಿತಿಯ ಕಾರ್ಯದರ್ಶಿ ಆವಿಕ್ ಸಹಾ ಅವರು ಮಾತನಾಡಿ, 'ರೈತರ ಹೋರಾಟ ಮುಂದುವರಿಯಲಿದೆ. ನಮ್ಮ ಬೇಡಿಕೆಗಳು ಈಡೇರಿಕೆಯಾಗದಿದ್ದರೆ, ಸರ್ಕಾರದ ಅಧಿಕೃತ ಪರೇಡ್ಗೆ ತೊಂದರೆಯಾಗದಂತೆ ಗಣರಾಜ್ಯೋತ್ಸವ ಆಚರಿಸಲು ನಾವು ರಾಜಧಾನಿ ಪ್ರವೇಶಿಸಲಿದ್ದೇವೆ' ಎಂದು ಎಚ್ಚರಿಕೆ ನೀಡಿದ್ದಾರೆ.
ಇಂದು ದೆಹಲಿ ವಿಜ್ಞಾನಭವನದಲ್ಲಿ ಮಧ್ಯಾಹ್ನ 2 ಗಂಟೆಗೆ ರೈತರು ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಯಲಿದೆ.
0 التعليقات: